ತಲ್ಲಣಗಳಾ? ನೋ ಚಾನ್ಸ್… ಡೈಲೆಮಾಗಳು ನಮ್ಮನ್ನು ಕಾಡುವುದಿಲ್ಲ. ನಮ್ಮನ್ನು ನಾವು ಜಡ್ಜ್ ಮಾಡಿಕೊಳ್ಳುತ್ತೇವೆ. ನಮ್ಮ ಭವಿಷ್ಯದ ಚಿತ್ರವನ್ನು ನಾವೇ ಬಿಡಿಸಿಕೊಳ್ಳುತ್ತೇವೆ. ಇದಕ್ಕಾಗಿ ನಾವು ಹೆತ್ತವರ ಮಾರ್ಗದರ್ಶನ ಕೇಳುವುದಿಲ್ಲ. ಹಿರಿಯರ ಕಂಡೀಷನ್ಗಳಿಗೆ ಒಪ್ಪುವುದೂ ಇಲ್ಲ. ನಮ್ಮ ಹಾದಿ ನಮ್ಮದು ಅನ್ನುತ್ತಿದ್ದಾರೆ ಇಂದಿನ ಯುವಕರು.
ಯೌವನ ಅನ್ನೋದು ಕೊಂಚ ತಡವಾಗಿ ಬಂದಿದ್ದರೆ ಜೀವನದಲ್ಲಿ ಅದರಷ್ಟು ಒಳ್ಳೆಯ ಸ್ಥಿತಿ ಇನ್ನೊಂದಿರಲಿಲ್ಲ ಅನ್ನುತ್ತಾನೆ ಬ್ರಿಟಿಷ್ ರಾಜಕಾರಣಿ ಹರ್ಬರ್ಟ್ ಹೆನ್ರಿ ಆಸ್ಕಿತ್. ಬಹಳಷ್ಟು ಜನರಿಗೆ ಆಗೋದು ಹೀಗೆಯೇ, ತಾರುಣ್ಯ ಬಂದಾಗ ಅದನ್ನು ಸರಿಯಾಗಿ ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ. ತನ್ನನ್ನು ತಾನು ಅಳೆದುಕೊಂಡು ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳುವ ಆ ಸತ್ವಭರಿತ ಸಮಯ ಸುಮ್ಮನೇ ಕೈಜಾರಿಬಿಡುತ್ತದೆ. ಬಳಿಕ ಕೊಂಚ ವಯಸ್ಸಾದ ಮೇಲೆ, ಈಗ ಯೌವನ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅನ್ನುವ ಹಳಹಳಿಕೆ.
ಆದರೆ ಇಂದಿನ ಯುವಕರೆಲ್ಲ ಹೀಗಲ್ಲ. ಇವರು ನಾಳೆ ಯೌವನ ಕಳೆದ ಮೇಲೆ ಹೀಗೆಲ್ಲ ಪಶ್ಚಾತ್ತಾಪ ಪಡುವವರೂ ಅಲ್ಲ. ಇಂದೇ, ಈಗಲೇ ನಾಳೆಗೊಂದು ಭದ್ರ ಅಡಿಪಾಯ ಹಾಕಿಕೊಳ್ಳುತ್ತಾರೆ ಈ ಹುಡುಗರು. ತಮ್ಮ ಉದ್ಯೋಗ, ಭವಿಷ್ಯದ ಬಗೆಗೆ ಇವರಿಗೊಂದು ಸ್ಪಷ್ಟ ನಿಲುವು ಇದೆ. ತಮ್ಮ ಜೀವನದ ತೀರಕ್ಕೆ ತಾವೇ ದೋಣಿಯನ್ನು ಹುಟ್ಟುಹಾಕುತ್ತಾ ಕೊಂಡೊಯ್ಯುವಷ್ಟು ಗಟ್ಟಿಗರೂ ಇವರು ಹೌದು.
ನಮ್ಮ ಕನಸು ನಮ್ಮದು
‘ನಾನು ಓದಿ ಫೈನಾನ್ಸ್ ಮ್ಯಾನೇಜರ್ ಆಗ್ತೇನೆ’ ಹೀಗನ್ನುತ್ತಾನೆ ಉಡುಪಿಯ ೯ನೇ ತರಗತಿಯ ವಿದ್ಯಾರ್ಥಿ ನಿರಂಜನ್ ಮೊಳೆಯಾರ. ಈ ಹುದ್ದೆಗೇರುವುದಕ್ಕೆ ಏನೇನು ಓದಬೇಕು, ಯಾವೆಲ್ಲ ತಯಾರಿ ಮಾಡಬೇಕು ಎಂಬುದು ಎಲ್ಲವೂ ಅವನಿಗೆ ಗೊತ್ತು. ಅಚ್ಚರಿಯೆಂದರೆ ಇದನ್ನೆಲ್ಲ ಆತ ತಿಳಿದುಕೊಂಡದ್ದು ಅಪ್ಪನ ಸಹಾಯದಿಂದಾಗಲೀ, ಅಮ್ಮನ ಸಹಾಯದಿಂದಾಗಲೀ ಅಲ್ಲ. ತಾನೇ ಇಂಟರ್ನೆಟ್ನಲ್ಲಿ ಜಾಲಾಡಿದ, ಎಲ್ಲವನ್ನೂ ತಿಳಿದುಕೊಂಡ.
ಹೀಗೇ ತಾವಾಗಿಯೇ ತಮ್ಮ ಮುಂದಿನ ಓದು, ಉದ್ಯೋಗ ಎಲ್ಲವನ್ನೂ ಸ್ಕೆಚ್ ಮಾಡಿಕೊಂಡ ಹುಡುಗರು ಅದೆಷ್ಟೋ. ‘ಇದು ಕಾಂಪಿಟಿಟಿವ್ ವರ್ಲ್ಡ್. ಇಲ್ಲಿ ನಾವು ಮುಂದೆ ಹೋಗ್ಬೇಕಾದ್ರೆ ತುಂಬಾ ಪ್ರಿಪೇರ್ ಆಗಿರ್ಬೇಕು, ಪ್ರೀಪ್ಲಾನ್ ಇರ್ಬೇಕು. ಅದ್ಕೇ, ನಾನು ಪಿಯುಸಿಲಿ ಇರೋವಾಗ್ಲೇ ಫ್ಯಾಷನ್ ಡಿಸೈನರ್ ಆಗೋದು ಅಂತ ಡಿಸೈಡ್ ಮಾಡ್ಕೊಂಡು ಅದೇ ಫೀಲ್ಡ್ಗೆ ಬಂದೆ’ ಅಂತಾರೆ ಬೆಂಗಳೂರಿನ ಫ್ಯಾಷನ್ ಡಿಸೈನರ್ ಸ್ವಾತಿ. ಇವರಿಗೆಲ್ಲ ಕನಸು ಕಟ್ಟಿಕೊಟ್ಟವರಿಲ್ಲ, ಕನಸು ಕಾಣುವುದನ್ನು ಹೇಳಿಕೊಟ್ಟವರಿಲ್ಲ. ಅವರ ಕನಸು ಅವರದೇ.
ನಮ್ಮಿಂದಲೇ ನನಸು
ಇವರೆಲ್ಲ ಬರಿಯ ಕನಸು ಕಾಣೋದಷ್ಟೇ ಅಲ್ಲ, ಅದನ್ನು ನನಸು ಮಾಡಿಕೊಳ್ತಾರೆ ಕೂಡ. ಶಿರಸಿಯಲ್ಲಿರೋ ಗಾಯತ್ರಿ ಇದೀಗಷ್ಟೇ ಪಿಯುಸಿ ಮುಗಿಸಿ ಬಿಕಾಂ ಮೆಟ್ಟಿಲು ಹತ್ತಿದ್ದಾರೆ. ಮುಂದೆ ಸಿಎ ಓದಬೇಕೆಂಬುದು ಅವರಾಸೆ. ಇದಕ್ಕಾಗಿ ಈಗಲೇ ರೆಡಿಯಾಗುತ್ತಿದ್ದಾರೆ ಆಕೆ. ಜೊತೆಗೆ ಟ್ಯಾಲಿ ಇತ್ಯಾದಿ ಅಕೌಂಟಿಂಗ್ ಸಾಫ್ಟ್ವೇರ್ಗಳ ಕಲಿಕೆಯೂ ನಡೆದಿದೆ. ಹಳ್ಳಿ ಹುಡುಗಿಯಾದರೇನು, ಯಾರ್ಯಾರಲ್ಲೋ ಕೇಳಿ ಮುಂದುವರಿಯಬಾರದೆಂದಿದೆಯೇ ಅನ್ನೋದು ಗಾಯತ್ರಿಯ ನಿಲುವು. ಆಕೆಯ ಹಾಗೆಯೇ ಮಾಸ್ಟರ್ ಆಫ್ ಬಿಸ್ನೆಸ್ ಸ್ಟಡೀಸ್ ಓದುತ್ತಿರುವ ಪೃಥ್ವಿಗೂ ಸಿಎ ಜೊತೆಗೆ ಐಸಿಡಬ್ಲ್ಯೂಎ ಮಾಡೋ ಹಂಬಲ. ‘ನಾನು ಕೆಲಸ ಮಾಡುತ್ತಲೇ ಅದನ್ನೂ ಪಾಸ್ ಮಾಡ್ತೇನೆ’ ಅಂತಾರೆ ಪೃಥ್ವಿ. ಲೆಕ್ಚರರ್ಸ್ ಜೊತೆ, ಆ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಂದಿಗೆ ಚರ್ಚೆ ಮಾಡಿ ಈ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದಾರೆ ಪೃಥ್ವಿ.
ಓದಿನಲ್ಲಿ ಮುಂದೆ ಬರುವುದಕ್ಕೆ, ಉದ್ಯೋಗ ಹಿಡಿಯುವುದಕ್ಕೆ ಯಾವೆಲ್ಲ ದಾರಿಗಳಿವೆಯೋ ಅದನ್ನೆಲ್ಲ ಹಿಡಿದುಕೊಂಡು ಮುನ್ನುಗ್ಗುವವರು ಇವರು. ಇಂಟರ್ನೆಟ್ನಂತಹ ಇಂದಿನ ಆಧುನಿಕ ಮಾಧ್ಯಮಗಳಂತೂ ಈ ನಿಟ್ಟಿನಲ್ಲಿ ಇವರಿಗೆ ತುಂಬಾ ಸಹಾಯ ಮಾಡಿವೆ.
ಕಾನಿಡೆಂಟ್ ಹುಡುಗರು
‘ನಾನು ಜರ್ನಲಿಸಮ್ ಫೀಲ್ಡ್ಗೆ ಹೋಗ್ಬೇಕು ಅಂತ ಒಂಭತ್ತನೇ ಕ್ಲಾಸ್ನಲ್ಲಿದ್ದಾಗಲೇ ಅಂದ್ಕೊಂಡೆ. ನಾನು ಈ ವರ್ಷ ಪತ್ರಿಕೋದ್ಯಮ ಪಿಜಿ ಓದುವವನಾಗಿದ್ರೂ ಈಗಲೂ ಫ್ಯಾಮಿಲಿಯಿಂದ ಆ ಕ್ಷೇತ್ರ ಬೇಡ ಅಂತ ವಿರೋಧ ವ್ಯಕ್ತವಾಗೋದಿದೆ. ಆದ್ರೆ, ನಾನು ಕೇರ್ ಮಾಡೋಲ್ಲ. ನಂಗೆ ಏನಾಗ್ಬೇಕೋ ಅದನ್ನೇ ಮಾಡ್ತೇನೆ’ ಅಂತಾರೆ ಉಜಿರೆಯ ಪತ್ರಿಕೋದ್ಯಮ ವಿದ್ಯಾರ್ಥಿ ಇರ್ಷಾದ್. ಹೈಸ್ಕೂಲ್ನಿಂದಲೇ ತನ್ನ ಬರವಣಿಗೆಯನ್ನು ತಾನೇ ರೂಢಿಸಿಕೊಂಡ ಈ ಹುಡುಗನಿಗೆ ಎಷ್ಟೇ ಕಷ್ಟವಾದರೂ ತನ್ನ ಗುರಿ ಮುಟ್ಟಿಯೇ ತೀರುತ್ತೇನೆಂಬ ವಿಶ್ವಾಸ.
ಈ ಹುಡುಗರ ಆತ್ಮವಿಶ್ವಾಸದ ಗುಟ್ಟು ಅವರೊಳಗೇ ಇದೆ. ಇವರೆಲ್ಲ ತಮ್ಮ ಶಕ್ತಿಯನ್ನು ಕಂಡುಕೊಂಡಿದ್ದಾರೆ. ಹೆತ್ತವರಿಗಿಂತ ಹೆಚ್ಚು ಉಪನ್ಯಾಸಕರ, ಗೆಳೆಯರ ಪ್ರಭಾವ ಇವರ ಮೇಲಿದೆ. ಹೊಸ ಹೊಸ ವಿಷಯಗಳನ್ನು ತಾವಾಗಿ ತಿಳಿದುಕೊಳ್ಳುತ್ತಾರೆ, ಮಾಧ್ಯಮಗಳ ಸದುಪಯೋಗ ಮಾಡಿಕೊಳ್ಳುತ್ತಾರೆ.
ಆದರೆ, ಮುಂದೇನು ಅನ್ನುತ್ತ ಡೈಲೆಮಾದಲ್ಲಿರುವ ಎಳೆಯರು ಯಾರೂ ಇಲ್ಲವೇ ಅನ್ನಬೇಡಿ. ಅಂತಹ ಹುಡುಗರ ಸಂಖ್ಯೆಯೂ ಒಂದಷ್ಟಿದೆ. ಇವರೆಲ್ಲ ಒಂದು ಕ್ಷಣ ದ್ವಂದ್ವದಲ್ಲಿ ನಿಂತರೂ ಮತ್ತೆ ಅದನ್ನು ಸ್ಪಷ್ಟಪಡಿಸಿಕೊಂಡು ಮುಂದಕ್ಕೆ ನುಗ್ಗುವಷ್ಟು ಛಾತಿವಂತರು. ಎಳವೆಯಿಂದಲೇ ‘ನೀನು ಡಾಕ್ಟರಾಗು, ನೀನು ಎಂಜಿನಿಯರಾಗ್ಬೇಕು’ ಅನ್ನುವ ಹೆತ್ತವರ ಸಿದ್ಧಸೂತ್ರಕ್ಕೆ ಕಟ್ಟುಬಿದ್ದ ಯುವಕರೂ ಇಲ್ಲದಿಲ್ಲ. ‘ಅದೆಷ್ಟೋ ಬಾರಿ ಹೀಗೆ ಇತರರ ಒತ್ತಾಯಕ್ಕೆ ಕಟ್ಟುಬಿದ್ದು ಇಷ್ಟವಿಲ್ಲದ ಕೋರ್ಸ್ಗೆ ಸೇರಿಕೊಂಡವರು ಮತ್ತೆ ತಮ್ಮ ಓದಿನ ಲೈನ್ ಚೇಂಜ್ ಮಾಡಿಕೊಳ್ಳುವುದಿದೆ’ ಅಂತಾರೆ ಬೆಂಗಳೂರಿನ ಉಪನ್ಯಾಸಕ ಶೇಷಗಿರಿ.
ನಮ್ಮ ಸ್ಟೈಲೇ ಬೇರೆ
ತಮ್ಮ ಹಾದಿಯನ್ನು ತಾವೇ ಕಂಡುಕೊಳ್ಳುವ ಈ ಹುಡುಗರ ರೀತಿ ನೀತಿ ಎಲ್ಲವೂ ಅವರಿಗೇ ವಿಶಿಷ್ಟವಾದುದು. ಇವರು ಯಾರನ್ನೂ ಅನುಕರಿಸುವವರಲ್ಲ. ಹಳೆಯದರ ಹಿಂಬಾಲಕರೂ ಅಲ್ಲ. ಹಿಂದೆ ಉದ್ಯೋಗಕ್ಕೆ ಬರಿಯ ಓದು ಮುಖ್ಯವಾಗುತ್ತಿತ್ತು. ಆದರೆ ಇಂದು ಕೌಶಲವೂ ಮುಖ್ಯ ಎಂಬುದು ಇವರಿಗೆ ತಿಳಿದಿದೆ. ಅದಕ್ಕೇ ತಮಗೆ ಅಗತ್ಯವಾದುದನ್ನು ತಾವು ರೂಢಿಸಿಕೊಳ್ಳುವತ್ತಲೇ ಇವರ ನಿರಂತರ ಪ್ರಯತ್ನ. ತಮ್ಮ ನಾಳೆಗಳ ಚಿತ್ರಗಳನ್ನು ತಮ್ಮದೇ ಕ್ಯಾನ್ವಾಸ್ನಲ್ಲಿ ಚೆಂದವಾಗಿ ಬಿಡಿಸಿಕೊಳ್ಳುವಲ್ಲಿ ಇವರು ನಿಪುಣರು.
ಇವರೆಲ್ಲರಿಂದಾಗಿಯೇ ‘ಯುತ್ ಈಸ್ ವೇಸ್ಟೆಡ್ ಆನ್ ದ ಯಂಗ್’ ಎನ್ನುವ ಬರ್ನಾರ್ಡ್ ಶಾನ ಮಾತೂ ಸುಳ್ಳಾಗಿದೆ.
———
ನಂಗೆ ಮೊದಲಿನಿಂದ್ಲೂ ಫೈನಾನ್ಸ್ ಮತ್ತು ಅಕೌಂಟಿಂಗ್ ಅಂದ್ರೆ ಇಷ್ಟ. ಅದ್ಕೇ ಡಿಗ್ರಿ ಆದ್ಮೇಲೆ ಎಂಬಿಎ ಫೈನಾನ್ಸ್ ಮಾಡಿದೆ. ಯವುದು ಓದಿದ್ರೆ ಏನು ಅಡ್ವಾಂಟೇಜ್ ಇದೆ, ಹೇಗೆ ಬೆಳೀಬಹುದು ಎಂದೆಲ್ಲ ನನ್ನ ಸೀನಿಯರ್ಸ್, ಲೆಕ್ಚರರ್ಸ್ ಹೇಳ್ತಿದ್ರು. ಹಾಗೇ ಇಂಟರ್ನೆಟ್ ಮೂಲಕವೂ ಮಾಹಿತಿ ಪಡ್ಕೊಂಡೆ.
ನಿತಿನ್ ಹೆಗ್ಡೆ ಮುತ್ತಿಗೆ, ಕಾರ್ಪೊರೇಟ್ ಅಕಾರಿ, ಬೆಂಗಳೂರು.
ನನ್ನ ಓದಿನ ವಿಷಯದಲ್ಲಿ ಹೈಸ್ಕೂಲ್ನಿಂದ ತೊಡಗಿ ನಂದೇ ಡಿಸಿಷನ್. ಚಿಕ್ಕಂದಿನಿಂದಲೂ ಆಸ್ಟ್ರಾನಮಿ, ಫಿಸಿಕ್ಸ್ ಅಂದ್ರೆ ಆಸಕ್ತಿ ನಂಗೆ. ಅದಕ್ಕೆ ಮುಂದೆ ಇದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡ್ಬೇಕು ಅಂತ ಇದ್ದೇನೆ. ಹೆಚ್ಚು ಹಣ ಮಾಡೋ ಉದ್ಯೋಗ ನನಗೆ ಬೇಡ. ಮನೆಯಲ್ಲೂ ಈ ಬಗ್ಗೆ ಒತ್ತಡ ಏನಿಲ್ಲ.
ಶಚಿ ಮದ್ದೂರು, ಎಂಎಸ್ಸಿ ಫಿಸಿಕ್ಸ್, ಎನ್ಇಟಿಕೆ, ಸುರತ್ಕಲ್.
ತಮ್ಮ ಭವಿಷ್ಯದ ವಿಷಯದಲ್ಲಿ ಯುವಕರು ಈಗ ತುಂಬಾ ಇಂಡಿಪೆಂಡೆಂಟ್ ಆಗಿದ್ದಾರೆ. ತಮ್ಮ ಮುಂದಿನ ಓದು, ಉದ್ಯೋಗ ಎಲ್ಲವನ್ನೂ ಅವರು ತಾವಾಗಿಯೇ ನಿರ್ಧರಿಸಿಕೊಳ್ಳುವಷ್ಟು ಸಬಲರು. ಇದಕ್ಕಾಗಿ ಅವರು ಹೆತ್ತವರ ಮುಖ ನೋಡುವುದೂ ಇಲ್ಲ. ಇಂಟರ್ನೆಟ್ನಂತಹ ಮಾಧ್ಯಮಗಳ ಸಹಾಯವೂ ಅವರಿಗಿದೆ.
-ಜಯದೇವ ಪ್ರಸಾದ ಮೊಳೆಯಾರ, ಪೋಷಕರು.